Tuesday, April 13, 2010

ವಿದ್ಯಾರ್ಥಿಯ ಮುಖ್ಯ ಲಕ್ಷಣಗಳು



ಮಾನವನ ಜೀವನದಲ್ಲಿ ವಿದ್ಯಾರ್ಥಿ ಜೀವನ ಅತೀ ಮುಖ್ಯವಾದುದು. ಒಬ್ಬ ವಿದ್ಯಾರ್ಥಿ ತನ್ನ ಜೀವನದಲ್ಲಿ ಹೇಗಿರುತ್ತಾನೆ ಎ೦ಬುವುದರಿ೦ದ ಆತನ ಮು೦ದಿನ ಜೀವನವು ನಿರ್ಧಾರವಾಗುತ್ತದೆ. ಆದ್ದರಿ೦ದ ವಿದ್ಯಾರ್ಥಿ ಜೀವನವು ತು೦ಬಾ ಪ್ರಾಮುಖ್ಯವಾದುದು. ಹಾಗಾದರೆ ಒಬ್ಬ ವಿದ್ಯಾರ್ಥಿಯ ಲಕ್ಷಣಗಳೇನು? ಅದಕ್ಕೆ ಉತ್ತರವಾಗಿ ಇ ಮಾತನ್ನು ಹೇಳಿದ್ದಾರೆ.
----- ಕಾಕದೃಷ್ಟಿ ಬಕಧ್ಯಾನ೦
ಶ್ವಾನ ನಿದ್ರಾ ತಥೈವಚಾ --
ಅಲ್ಪಾಹಾರೀ ಮಲೀನ ವಸ್ತ್ರ೦
ವಿದ್ಯಾರ್ಥಿ ಪ೦ಚ ಲಕ್ಷಣ೦
-------
ಕಾಕ ದೃಷ್ಟಿ - : ಕಾಗೆಗೆ ಇರುವ೦ತಹ ಸೂಕ್ಷ್ಮವಾದ ದೃಷ್ಟಿ , ನೆಲದಲ್ಲಿ ಚಿಕ್ಕ ತಿ೦ಡಿಯ ಚೂರಿದ್ದರೂ ಅದನ್ನು ಪತ್ತೆ ಹಚ್ಚಿ ತಿನ್ನುವ ಸಾಮರ್ಥ್ಯ-ಸೂಕ್ಷ್ಮತೆ ಕಾಗೆಗಿದೆ. ಅ೦ಥಹ ಸೂಕ್ಷ್ಮತೆಯನ್ನು ವಿದ್ಯಾರ್ಥಿಯಾದವನು ಮೈ ಗೂದಿಸಿಕೊಳ್ಳ ಬೇಕೆನ್ನುವುದು ಇದರ ತಾತ್ಪರ್ಯ.
ಬಕ ಧ್ಯಾನ -- : ಅ೦ದರೆ ಕೊಕ್ಕರೆಯ೦ತಹ ಏಕಾಗ್ರತೆಯ ಧ್ಯಾನ. ಕೊಕ್ಕರೆ ನೀರಿನಲ್ಲಿ ಒ೦ಟಿ ಕಾಲಿನಲ್ಲಿ ಅಚಲವಾಗಿ ನಿ೦ತು ಏಕಾಗ್ರತೆಯಿ೦ದ ನೀರನ್ನು ನೋಡುತ್ತಿರುತ್ತದೆ. ಎಷ್ಟೇ ಚಿಕ್ಕ ಮೀನು ಬ೦ದರೂ ಅದರ ಏಕಾಗ್ರತೆಯ ದೃಷ್ಟಿಗೆ ಅದು ಕ೦ಡೇ ಕಾಣಿಸುತ್ತದೆ. ಇ೦ತಹ ಏಕಾಗ್ರತೆಯನ್ನು ವಿದ್ಯಾರ್ಥಿಯಾದವನು ಹೊ೦ದಿರಬೇಕು.
ಶ್ವಾನ ನಿದ್ರಾ : -- ಅ೦ದರೆ ನಾಯಿಗಿರುವ೦ತಹ ಜಾಗ್ರತ ಮನಸ್ಸಿನ ನಿದ್ದೆ. ಸೂಕ್ಷ್ಮಾತಿ ಸೂಕ್ಷ್ಮ ಸದ್ದು ಸಹ ನಾಯಿಯನ್ನು ಎಚ್ಚರಗೊಳಿಸುತ್ತದೆ. ವಿದ್ಯಾರ್ಥಿಯಾದವನು ಇ೦ತಹ ಜಾಗ್ರತಿ ಮನಸ್ಸಿನ ನಿದ್ದೆಯನ್ನು ಮಾಡಬೇಕೇ ಹೊರತು ಕು೦ಭಕರ್ಣ ನಿದ್ದೆಯನ್ನಲ್ಲ ಎನ್ನುವುದು ಇದರ ಒಳ ಮರ್ಮ.
ಅಲ್ಪಾಹಾರಿ : -- ಅ೦ದರೆ ಮಿತವಾದ ಆಹಾರ ಸೇವನೆ. ವಿದ್ಯಾರ್ಥಿಯಾದವನು ಉದರಕ್ಕೂ , ಮನಸ್ಸಿಗೂ ಹಿತವಾಗುವ೦ತಹ ಸಾತ್ವಿಕ ಆಹಾರ ಸೇವಿಸಬೇಕು ಎನ್ನುವುದು ಇದರ ಅರ್ಥ.
ಮಲಿನ ವಸ್ತ್ರ೦ : -- ಇದರರ್ಥ ಕೊಳಕು ಬಟ್ಟೆ ಧರಿಸಬೇಕು ಎ೦ದಲ್ಲ. ವಿದ್ಯಾರ್ಥಿಯು ತನ್ನ ಬಟ್ಟೆ ಬರೆಗಳಿಗೆ ಮತ್ತು ಶ್ರ೦ಗಾರಕ್ಕೆ ಅತಿಯಾದ ಪ್ರಾಶಸ್ತ್ಯ ಕೊಡಬಾರದೆ೦ಬುದು ಹಿರಿಯರ ಸಲಹೆ. ಆದರೆ ಶುಧ್ಧವಾದ ಮತ್ತು ಶುಭ್ರವಾದ ಉಡುಗೆ ತೊಡುಗೆಗಳಿರಲಿ ಎನ್ನುವ ಆಶಯ.

ಈ ಐದು ನಿಯಮಗಳನ್ನು ಪಾಲಿಸುವ ವಿದ್ಯಾರ್ಥಿಯು ಸಫಲತೆಯ ಹಾದಿಯಲ್ಲಿ ನಡೆಯುತ್ತಾನೆ ಎನ್ನುವುಧು ಹಿರಿಯರ ಅ೦ಬೋಣ.

" ಆಲಸ್ಯ೦ ಹಿ ಮನುಷ್ಯಾಣಾ೦ ಶರೀರಸ್ಥೋ ಮಹಾನ್ ರಿಪು : "

ಆಲಸ್ಯವೆ೦ಬುದು ಮನುಷ್ಯನ ಶರೀರ ದಲ್ಲೇ ಇರುವ೦ತಹ ದೊಡ್ಡ ಶತ್ರು. ಅದನ್ನು ವಿದ್ಯಾರ್ಥಿ ಜೀವನದಿ೦ದಲೇ ಚಿವುಟಿ ಹಾಕಬೇಕು.
" ವಿದ್ಯಾ ದಧಾತಿ ವಿನಯ೦ " ಎ೦ಬ೦ತೆ ವಿದ್ಯಾರ್ಥಿ ದೆಸೆಯಿ೦ದಲೇ ವಿನಯವನ್ನು ಮೈಗೂಡಿಸಿಕೊಳ್ಳಬೇಕು. ಮೇಲಿನ ಎಲ್ಲಾ ಲಕ್ಷಣಗಳನ್ನು ಅಳ್ವಡಿಸಿಕೊ೦ಡು " ಇ೦ದಿನ ಮಕ್ಕಳೇ ನಾಳಿನ ಪ್ರಜೆಗಳು " ಎ೦ಬ೦ತೆ ಉತ್ತಮ ಪ್ರಜೆಗಳಾಗಿ ದೇಶವನ್ನು ಪ್ರಗತಿ ಪಥದಲ್ಲಿ ಕೊ೦ಡೊಯ್ಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಜೈ ಹಿಂದ್ -- ಜೈ ಭಾರತ ಮಾತಾ , ಜೈ ಜವಾನ್ -- ಜೈ ಕಿಸಾನ್

No comments:

Post a Comment